ಬೆಂಗಳೂರು: ರಾಜ್ಯ ಸಚಿವರೊಬ್ಬರು ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಇದೀಗ ಸಂತ್ರಸ್ತ ಮಹಿಳೆಯ ಪರವಾಗಿ ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ನಗರ ಪೊಲೀಸ್ ಕಮೀಷನರ್ ಕಚೇರಿಗೆ ಆಗಮಿಸಿದ್ದು, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ದೂರು ನೀಡಲು ಆಗಮಿಸಿದ್ದಾಗಿ ಅವರು ಪೊಲೀಸ್ ಆಯುಕ್ತರ ಕಚೇರಿ ಬಳಿ ಮಾಧ್ಯಮದವರಿಗೆ ತಿಳಿಸಿದರು. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಂತ್ರಸ್ತೆ ಹಾಗೂ ಆಕೆಯ ಮನೆಯವರು ದೂರು ಸಲ್ಲಿಸಲು ನಮ್ಮ ಸಹಾಯ ಕೇಳಿದ್ದಕ್ಕಾಗಿ, ಇದೀಗ ವಕೀಲರ ಬಳಿ ಚರ್ಚಿಸಿ ಸಂತ್ರಸ್ತೆ ಪರ ದೂರು ನೀಡಲು ಬಂದಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದರು.