ನನ್ನ ರಾಜಕೀಯ ಜೀವನ ಇಲ್ಲಿ ಆರಂಭವಾಗಿದ್ದು, ಇಲ್ಲಿಯೇ ಅಂತ್ಯವಾಗಲೂಬಹುದು, ಗೊತ್ತಿಲ್ಲ: ಸಚಿವ ಆನಂದ್ ಸಿಂಗ್
![](https://4dnews.in/wp-content/uploads/2021/08/2fb7d0ba6280c7977ecea0ea4c2ed590d70e2234c1975d81d0ad0823314384bd.jpg)
ಹೊಸಪೇಟೆ: ನಾನು ರಾಜ್ಯದ ಉನ್ನತ ರಾಜಕಾರಣಿಯೇನಲ್ಲ, ವಿಜಯನಗರ ಸಾಮ್ರಾಜ್ಯದೊಳಗೆ ಹೊಸಪೇಟೆಯಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ರಾಜಕಾರಣಿಯಷ್ಟೆ, ನನ್ನ ತಪ್ಪಿದ್ದರೆ ತಿದ್ದಿಕೊಳ್ಳುವ ವ್ಯಕ್ತಿ ನಾನಲ್ಲ, ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುವ ತಂತ್ರ ನಾನು ಮಾಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಇಂದು ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನನಗೆ ಕೆಲವೊಂದು ನೋವುಗಳಿವೆ ಹೌದು, ಅದನ್ನು ನಾನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಲು ಬಯಸುತ್ತೇನೆ, ಇವತ್ತು ನಾನು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ, ಹೇಳಿಕೆ ನೀಡದಂತೆ ನಮ್ಮ ನಾಯಕರು ಸಹ ಸೂಚನೆ ನೀಡಿದ್ದಾರೆ, ನೀವು ಮಾಧ್ಯಮದವರು ಊಹಿಸಿದ ರೀತಿಯಲ್ಲಿ ಇವತ್ತು ನನ್ನಿಂದ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ನನ್ನ ರಾಜಕೀಯ ಜೀವನ ಇದೇ ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾಯಿತು. ನಮ್ಮ ನಾಯಕರ ಮೇಲೆ ನನಗೆ ನಂಬಿಕೆಯಿದೆ, ಆದರೆ ನಾಯಕರಿಗೆ ನನ್ನ ಮೇಲೆ ನಂಬಿಕೆಯಿದೆ ಎಂದು ಅನಿಸುತ್ತಿಲ್ಲ, ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ ಎಂದರು.
ನಾನು ಇದೇ ವೇಣುಗೋಪಾಲ ಸನ್ನಿಧಿ ಬಳಿ ರಾಜಕೀಯ ಜೀವನ ಆರಂಭಿಸಿದ್ದು, ಇಲ್ಲಿಯೇ ಅಂತ್ಯವಾಗಲೂ ಬಹುದು, ಗೊತ್ತಿಲ್ಲ, ಮುಂದೆ ಏನಾಗಬಹುದು ಎಂದು, ರಾಜಕೀಯ ಜೀವನ ಪುನರಾರಂಭವಾಗಲೂಬಹುದು, ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಮಾಡುತ್ತೇನೆ ಎಂದರು.